೧. ಪಡೆದಕ್ಕಿಂತ ಕೊಟ್ಟದ್ದರಲ್ಲೇ ಹೆಚ್ಚು ಸಮಾಧಾನ,
ಬಾಹುಬಲಿಗೆ ಸಿಕ್ಕ ಶಾಂತಿ ಭರತನಿಗೆ ಸಿಗಲಿಲ್ಲ
ಬುಧ್ಧನಿಗೆ ಸಿಕ್ಕ ಶಾಂತಿ ಸಿಕಂದರನಿಗೆ ಸಿಗಲಿಲ್ಲ
೨ . ಬರೆದ ಕವಿಯ ಮನದಿಂದ,
ಮನ ಬರೆದ ಅಕ್ಷರದಿಂದ ,
ಅಕ್ಷರವ ಹಿಡಿದಿಟ್ಟ ಭಾವದಿಂದ,
ಭಾವವ ಭಾವಿಸಿದ ಮನಸಿನಿಂದ,
ಮನಸಿನ ಅಂದಿನ ಸ್ಥಿತಿಇಂದ
ಕವಿತೆಯ ಸಾರ್ಥಕ್ಯ ಯಾವುದರಿಂದ?
ಇದೆಲ್ಲದರಿಂದ .
೩. ಈ ಕವಿತೆಗಳೆಕೋ,
ಕಪ್ಪು ಎಕ್ಸ್ರೇ ಥರ,
ಲೆಕ್ಕ ಬರೆದಿಟ್ಟ ದಪ್ಪ ಲೆಡ್ಜರ್ ಥರ,
ಚೂರಾದ ಹೂದಾನಿ ಥರ,
ಕಾಣಿಸುತ್ತಿವೆ ನನಗೆ
೪. ಅಲೆಗಳೆಷ್ಟಿದ್ದರೇನು, ಒಂದೂ ಉಳಿಯಲಿಲ್ಲ ಕಡಲಿಗೆ
ನೆನಪುಗಳೆಷ್ಟಿದ್ದರೇನು ನೀನಿಲ್ಲ ನನ್ನ ಬಳಿಗೆ
೫. ಹನಿ ಹನಿಗೂ
ಪುಟಿದೇಳುವ ತವಕವೇಕೆ ?
ಪ್ರತಿ ಹನಿಗೂ ನಿನ್ನ
ಸೇರುವ ಬಯಕೆಯದಕೆ
೬. ಚಿಟಿಕೆ ಕುಂಕುಮದಿಂದ
ನಿನ್ನಾಯುಷ್ಯ ಹೆಚ್ಚುವುದಾದರೆ
ಸೇರು ಕುಂಕುಮವನಿಟ್ಟೇನು
ನನ್ನುಸಿರು ನಿನ್ನ ಸೇರುವುದಾದರೆ
ಈ ಬದುಕ ಇಡಿಯಾಗಿ ಕೊಟ್ಟೇನು
೭. ಕ್ಷಣ ಕ್ಷಣಕ್ಕೂ ಬದಲಾಗುವುದು
ತೀರದ ವಿಳಾಸ
ನಿನ್ನೊಡನೆ ನನ್ನದು
ಬರಿ ಕಲ್ಪನಾ ವಿಲಾಸ
೮. ಅವನನ್ನೇ ಕುರಿತು ಏಕೆ
ಬರೆಯಬೇಕು ಪದ್ಯ ?
ಏಕೆಂದರೆ ಅವನಿಲ್ಲದ ಜಗತ್ತು
ನನಗೆ ವರ್ಜ್ಯ
೯. ನಿನ್ನ ಕಾಯುತ್ತಾ ಅಲೆಗಳನೆಣಿಸುತ್ತಿದ್ದೆ
ಲೆಕ್ಕ ಸಿಕ್ಕಲಿಲ್ಲ
ನಿನ್ನ ಕನಸೂ ಮುಗಿಯಿತಲ್ಲ !
೧೦. ಚಿತ್ತದ ತುಂಬಾ ನಿನ್ನದೇ
ಭಿತ್ತಿ ಪತ್ರಗಳು
ಸಾಕಲ್ಲವೇ ಮನದ ಗೋಡೆಯ ಅಲಂಕರಿಸಲು ?
११. जुदाई का कोई घम नहीं
आसूं बनके बसे हो तुम मुझ में कहीं
पर क्या करें, कमबख्त
आसूं भी आँखों में टिकते नहीं !
ಒಂದು ಜೀವಕೆರಡು ವರ್ಷ ತುಂಬಿದ ಸಂಭ್ರಮಕ್ಕೆ :
ಮಗಳೇ,
ಬದುಕಲ್ಲೆರಡರ ಪಾತ್ರ ಹಿರಿದು
ನೋಡುವ ಕಣ್ಣೆರಡು
ಕೇಳುವ ಕಿವಿಯೆರಡು
ಗಮ್ಯ ಸೇರಲು ನಡೆವ ಕಾಲೆರಡು
ಕಾಯಕವ ಕೈಗೊಳ್ವ ಕೈಗಳೆರಡು
ಸತ್ಯ ಸುಳ್ಳುಗಳೆರಡು
ಸರಿ ತಪ್ಪುಗಳೆರಡು
ಆಯ್ಕೆ ಮಾಡುವ ಮನಸು ಮಾತ್ರ ಒಂದೇ !
ಹಲ ಕಾಲ್ಗಳಲ್ಲಿ ನಡೆವ ಬಲವಿಲ್ಲ
ಹಲ ಕೈಗಳಲ್ಲಿ ದುಡಿವ ಕಸುವಿಲ್ಲ
ಎಷ್ಟೋ ಕಣ್ಗಳಲ್ಲಿ ಕನಸೇ ಇಲ್ಲ !
ಅಂತಹ ಜೀವಗಳ ಬಗ್ಗೆ ಪ್ರೀತಿ ಇರಲಿ
ನಿನ್ನ ಕಣ್ಣಲ್ಲಿ ಕನಸುಗಳ ಮೆರವಣಿಗೆ ನಿಲ್ಲದಿರಲಿ
ಒಂದು ವರ್ಷದ
ಹಾರೈಕೆ