Friday, March 30, 2012

ಅದ್ವೈತ

ಉಂಡಿದ್ದು ಸಿಹಿಯನ್ನೋ?
ಸಿಹಿಯ ಸವಿಯನ್ನೋ?
ಸವಿಯ ಖುಷಿಯನ್ನೋ?
ಖುಷಿಯ ಭಾವವನ್ನೋ?
ಎಲ್ಲವನ್ನೂ ಉಂಡು, 'ಅ'ಜೀರ್ಣಿಸಿಕೊಳ್ಳುವವ ಮನುಜ
ಭಾವದಲ್ಲೇ ಲೀನವಾದವ ಮನುಜಾಗ್ರಜ

ಪ್ರೀತಿಸಿದ್ದು ಜೊತೆಯನ್ನೋ?
ಜೊತೆಬಂದ ಹೆಜ್ಜೆಯನ್ನೂ?
ಹೆಜ್ಜೆ ಸಾಗಿದ ದಾರಿಯನ್ನೋ?
ದಾರಿ ಸವೆಸಿದ ಪಯಣವನ್ನೋ?
ಎಲ್ಲವನ್ನೂ ಪ್ರೀತಿಸಿ, ಕೊರಗುವವ ಮನುಜ
ಆದರೆ ಪಯಣದಲ್ಲೇ ಲೀನವಾದವ  ಮನುಜಾಗ್ರಜ

ನಂಬಿದ್ದು  ಮಂತ್ರವನ್ನೋ?
ಮಂತ್ರದ ದೇವರನ್ನೋ?
ದೇವರ ಶಕ್ತಿಯನ್ನೂ?
ಶಕ್ತಿಯ ಇರುವಿಕೆಯನ್ನೋ?
ಎಲ್ಲವನ್ನೂ ನಂಬಿ,
ಕೊರಗುವವ ಮನುಜ
ತನ್ನಲ್ಲೇ 'ಶಕ್ತಿ'ಯ ಕಂಡವ ಮನುಜಾಗ್ರಜ







Monday, March 26, 2012

ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ

ಓದುವುದನ್ನು ಆರಂಭಿಸಿದಾಗಿನಿಂದ  ಬ್ರಾಹ್ಮಣರ ಬಗ್ಗೆ ಒಂದು ವರ್ಗದ ಆಪಾದನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅದೇನೋ ಎಲ್ಲರೂ 'ಪುರೋಹಿತ  ಶಾಹಿ' ಅನ್ನೋ ಪದದ ಧಾರಾಳ ಬಳಕೆ ಮಾಡುತ್ತಾರೆ. ಹಾಗಂದರೇನು ಅಂಥ ನಂಗೆ ಗೊತ್ತಿಲ್ಲ  ಶೋಷಿತವರ್ಗ  ಶೋಷಣೆ ಗಳನ್ನ ಮರೆಯೋದು ಅಷ್ಟು ಸುಲಭವಲ್ಲವೇನೋ? 
ಆದರೆ ತೆಗಳಿಕೆ ಯಾರಿಗೆ ಇಷ್ಟವಾಗತ್ತೆ? ನಂಗೂ ಬೇಜಾರಾಗ್ತಿತ್ತು. ಈಗ ಅಷ್ಟಾಗಲ್ಲ. ಈ ಘಟನೆ ನಡೆದ ಮೇಲೆ ಬೇಸರದ ಭಾವ ಇನ್ನೂ ಕಡಿಮೆಯಾಗಿದೆ.

ಗುಡಿಯ ಸಂಭ್ರಮ ಅಂಥ ಒಂದು ಕಾರ್ಯಕ್ರಮವನ್ನ, ಬೆಂಗಳೂರಿನ ಕೆಲವು ಗುಡಿಗಳಲ್ಲಿ ಆಯೋಜಿಸಿದ್ದರು.
ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿಯ ಗುಡಿ ನಾನು ಯಾವಾಗಲೂ ಹೋಗುವ ಗುಡಿಗಳಲ್ಲೊಂದು.
ಅಲ್ಲೂ ಗುಡಿಯ ಸಂಭ್ರಮದ ಕಾರ್ಯಕ್ರಮವಿತ್ತು, ಪ್ರಕಾಶ್ ಬೆಳವಾಡಿಯವರ ಒಂದು ನಾಟಕ ಇತ್ತು. ನೋಡೋಕೆ ಹೋಗಿದ್ದೆವು.
ಆವತ್ತು ಗುಡಿಯಲ್ಲಿ ಏನೋ ವಿಶೇಷ ಪೂಜೆ. ಸ್ವಾಮಿ ಗರುಡ ವಾಹನದ ಮೇಲೆ ಅಲಂಕೃತ ನಾಗಿ ಮೆರವಣಿಗೆಗೆ ಸಿಧ್ಧನಾಗಿ ಕುಳಿತಿದ್ದ.
ಉತ್ಸವ ಮುಗಿದ ಮೇಲೆ, ಒಳಗೆ ಗರ್ಭಗುಡಿಯ ದೇವರ ನೋಡಲು ನಾನು ಮತ್ತು ನನ್ನ ಮಗ ಹೋದೆವು. ಅಲ್ಲೇ ಪ್ರಾಂಗಣದಲ್ಲಿ
ಸಾಲಾಗಿ ಒಂದಷ್ಟು ಜನ ಕೂತಿದ್ದರು. ಅವರೆಲ್ಲರೂ ಶ್ರೀ ವೈಷ್ಣವರು . ಆ ಗುಡಿಗೆ ಶ್ರೀ ವೈಷ್ಣವ ಭಕ್ತರೇ ಪ್ರಮುಖರು . ಹಾಗೆ ಕೂತವರ ಮುಂದೆ ಎಲೆ ಇತ್ತು, ಪ್ರಸಾದ ಬಡಿಸುತ್ತಿದ್ದರು. ನಾವು ದೇವರ ನೋಡಿ ನಮಸ್ಕಾರ ಮಾಡಿ ಹೊರ ಬರುವಾಗ  ಮಗನ ಕಣ್ಣು ಎಲೆಯ ಮೇಲೆ ಹೋಯಿತು. ಎಂದೂ ಬಾಯ್ತೆರೆದು ತಿನ್ನಲು ಕೇಳದ ಮಗ " ಅಮ್ಮ,  ಓರು ಓಲಕ್ಕಿ ತಿಂತಿದಾರೆ, ನಂಗೂ ಬೇಕು" ಅಂದ. ಹೇಗೆ ಕೇಳೋದು?, ಅಲ್ಲಿ ಸಾರ್ವ ಜನಿಕರನ್ನ ಅವರು ಕರೆಯುತ್ತಿರಲಿಲ್ಲ. ಹಾಗೆ ಮರೆಸಿ ಹೊರಗೆ ಕರಕೊಂಡು ಬಂದೆ. ಅವ ಮರೆಯಲಿಲ್ಲ. ಸರಿ ಎಂದೂ ತಿನ್ನಲು ಕೇಳದ ಮಗ ಕೇಳುತ್ತಿದ್ದಾನೆ, ತಿಂತಾನೇನೋ ಅನ್ನೋ ಆಸೆ ಇಂದ,
ನಾನು ನನ್ನ ಪತಿ ಮತ್ತೆ ದೇವಳದ ಒಳಗೆ ಹೋದೆವು. ಅಷ್ಟು ಹೊತ್ತಿಗೆ ಕಚ್ಚೆ ಉಟ್ಟ ಶ್ರೀ ವೈಷ್ಣವ ಹೆಂಗಸರು, ಗಂಡಸರು ತಿಂದ ಎಲೆ ಹಿಡಿದು ಕೊಂಡು ಕೈ ತೊಳೆಯಲು ಹೊರ ಬರುತ್ತಿದ್ದರು. ಆದರೂ ಬಡಿಸುತ್ತಿದ್ದವರನ್ನ "ಸ್ವಲ್ಪ ಪ್ರಸಾದ ಕೊಡ್ತಿರಾ" ಅಂದೆ. "ಖಾಲಿಯಾಯ್ತು" ಅನ್ನೋ ಉತ್ತರ ಬಂತು. ಮತ್ತೆ ಮಗ ಕೇಳಿದ. ಅಲ್ಲೇ ಇದ್ದ ಒಬ್ಬ ಹೆಂಗಸು ಅಲ್ಲಿ ಹಾಲ್ ನ ಒಳಗೆ ಕೊಡ್ತಾರೆ
ಹೋಗಿ ಕೇಳಿ ಅಂದರು. ಸರಿ ಅಲ್ಲೂ ಹೋದೆವು. ಮತ್ತೆ ಕೇಳಿದೆವು. ನೋಡ್ತೀನಿ ಅಂದ  ಒಬ್ಬ ಪುಣ್ಯಾತ್ಮ  ಫೋನ್ ಬಂದು ಮಾಯವಾದರು . ಅಷ್ಟು ಹೊತ್ತಿಗೆ ಮೊದಲು ಕೇಳಿದ್ದ ವ್ಯಕ್ತಿ ಮತ್ತೆ ಬಂದರು. ಈ ಬಾರಿ ನೋಡ್ತೀನಿ ಅಂತ ಒಳ ಹೋದರು. ಹಾಲ್ ನಲ್ಲಿ ನಮ್ಮ ಮುಂದೆ ಸಾಲಾಗಿ ಎಲೆ ಇಟ್ಟು, ಪುಷ್ಕಳವಾಗಿ ಕದಂಬಂ, ಪೊಂಗಲ್ ಮತ್ತಿನ್ನಿನೇನೋ  ಹೆಸರುಗಳ ಪ್ರಸಾದಗಳನ್ನ ಬಡಿಸುತ್ತಿದ್ದರು. ಬಕೆಟ್ ತುಂಬಾ ಇದ್ದ ಪ್ರಸಾದಗಳು ನಮ್ಮ ಕಣ್ಣು ಕುಕ್ಕುತ್ತಿದ್ದವು. ಮುಂದೆಯೇ ರಾಶಿ ಬಾಳೆಯೂ ಬಿದ್ದಿತ್ತು.  ಸರಿ ಬಿಡು ಒಂದು ಎಲೆಯಲ್ಲಿ ಕೊಡ್ತಾರೆ ಅಂಥ ನಾವು ನಿಂತೆವು . ಒಳ ಹೋದಾತ ಬಂದರು "ತಗೋಳಮ್ಮ" ಅಂಥ ಒಂದು ಸೌಟಿನಲ್ಲಿ ಪೊಂಗಲ್ ತಂದಿದ್ದರು. ನಾನು ಒಂದು ಬಾಳೆ ಎಲೆ ಕೇಳೋಣ ಅನ್ನೋ ಅಷ್ಟರಲ್ಲಿ, ತುದಿ ಇಂದ ಒಂದು ತುತ್ತು ಪೊಂಗಲನ್ನು ನನ್ನ ಕೈಗೆ ಹಾಕಿ ಹೊರಟು ಹೋದರು . ಮಗ "ಇದು ಓಲಕ್ಕಿ ಅಲ್ಲ, ನಂಗೆ ಬೇಡ" ಅಂಥ ಮೂತಿ ತಿರುವಿದ.  ಸರಿ ಹೊರ ಹೋಗಿ ಅವನಿಗೆ ಬೇರೇನೋ ಕೊಡಸಿ ಸಮಾಧಾನ ಮಾಡಿದೆವು.

ಅವರು ಒಳಕರೆದು ಪ್ರಸಾದ ಕೊಡಲೆಂದು ನಾ ನೀರಿಕ್ಷಿಸಿರಲಿಲ್ಲ, ಕೇಳಿದ್ದು ನಾನೂ ಅಲ್ಲ. ಒಂದು ಮಗು ಅಷ್ಟು ಸ್ಪಷ್ಟವಾಗಿ ನನಗೆ ಪ್ರಸಾದ ಬೇಕು ಅಂದಾಗಲೂ ಕೊಡದೆ ಹೋದದ್ದು ಎಷ್ಟರ ಮಟ್ಟಿಗೆ ಸರಿ? ಇಂಥ ವರ್ತನೆಗಳು ಬ್ರಾಹ್ಮಣರ ವಿರುಧ್ಧದ ಆರೋಪಗಳಿಗೆ ತುಪ್ಪ ಸುರಿಯಲಾರವೇ? ಭಗವಂತನ ನಾಮವನ್ನ ಎಲ್ಲ ಸ್ತರದವರಿಗೆ  ತಲುಪಿಸುವ ಸಲುವಾಗಿ ಗೋಪುರದ ಮೇಲಿಂದ ನಾಮವನ್ನ ಉಚ್ಚರಿಸಿದ ಭಗವದ್ ರಾಮಾನುಜರ ಶಿಷ್ಯ ಪರಂಪರೆ ಇಲ್ಲಿಗೆ ಬಂತೇ? ಕಲ್ಲು ಕೃಷ್ಣನ ಕೈಗೆ ಬೆಣ್ಣೆ ಮುದ್ದೆಯನಿಟ್ಟವರಿಗೆ ಒಂದು ಮಗುವಿನಲ್ಲಿ ಕೃಷ್ಣ ಕಾಣಲಿಲ್ಲವೇ?

ಈ ಬರಹದ ಹಿಂದಿನ ಉದ್ದೇಶ ಯಾರನ್ನೂ ಹಳಿಯುವುದಲ್ಲ. ನನಗೆ ವೇಣುಗೋಪಾಲನ  ಸನ್ನಿಧಿ ಇಂದಿಗೂ ಪ್ರಿಯವೇ.  ಆದರೆ ಪುರದ ಹಿತವನ್ನ ಬಯಸಬೇಕಾದ  ಪುರೋಹಿತ , ಒಳಿತನ್ನು ಆಚರಿಸಿ ತೋರಿಸಬೇಕಾದ ಜ್ಞಾನಿ ಆಚಾರ್ಯ  ಎಲ್ಲಿ ಕಳೆದು ಹೋದ? ಎಂಬ ಪ್ರಶ್ನೆ ಕಾಡುತ್ತೆ.

ಮಾರನೆ ದಿನ ನನ್ನ ಸಹೋದ್ಯೋಗಿಗಳೊಂದಿಗೆ ಈ ಪ್ರಸಂಗ ಹೇಳುತ್ತಿದ್ದೆ . ಒಬ್ಬರೆಂದರು, "ನಾನು ಗುರು ರಾಘವೇಂದ್ರ ವೈಭವ ನೋಡುತ್ತೇನೆ. ಅದರಲ್ಲಿ ಗುರುಗಳು ಎಲ್ಲರನ್ನೂ ಎಷ್ಟು ಪ್ರೀತಿ ಇಂದ   ಕಾಣುತ್ತಾರೆ. ಆದರೆ ಇಂದಿನ ರಾಯರ  ಮಠಗಳಿಂದ ಅದನ್ನ ನೀರಿಕ್ಷಿಸಬಹುದೇ? ಬಹುಶಃ ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ".
ಅವರ ಮಾತು ನನ್ನ ಮನಸನ್ನ ಇನ್ನೂ ತಿಳಿಯಾಗಿಸಿತು.

ನನಗೆ ಅಲ್ಲಿದ್ದ ಯಾರೂ ವೈಯುಕ್ತಿವಾಗಿ ಪರಿಚಯದವರಲ್ಲಿ. ಯಾವ ವರ್ಗದ ಬಗ್ಗೆಯೂ  ನನಗೆ ಸಿಟ್ಟಿಲ್ಲ. ಇದು, ಉಣ್ಣಲು  ಕೇಳಿದ ಮಗುವಿಗೆ  ಇಕ್ಕಲಾಗದೇ ಹೋದ ತಾಯ  ಭಾವ ಮಾತ್ರ.

Thursday, March 22, 2012

ನಿರ್ಧರಿಸದ ನಿರ್ಧಾರ

ಹಾಗೂ ಹೀಗೂ  ಹತ್ತನೇ ತರಗತಿ ಮುಗಿಯುತ್ತಾ ಬಂತು.ಪರೀಕ್ಷಾ ಸಮಯ ಶುರುವಾಯಿತು. ಪೂರ್ವ ತಯಾರಿ ಪರೀಕ್ಷೆಯೂ ಮುಗಿದು ಹೋಯಿತು. ಎಲ್ಲಿಗೋ ಹೋಗಬೇಕಾಗಿ ಬಂದವಳಿಗೆ  ಅವನ ಕಾಲೇಜನ್ನು ದಾಟಿ ಹೋಗಬೇಕಿತ್ತು.
ಅವ ಸಿಕ್ಕರೂ ನಿಲ್ಲ ಬಾರದೆಂದು ನಿರ್ಧರಿಸಿ ಆಗಿತ್ತು . ಎಲ್ಲೂ ನೋಡದೆ, ಅವನ ನೀರಿಕ್ಷಿಸದೆ  ಹೊರಟಿದ್ದೆ. ಅನೀರಿಕ್ಷಿತಗಳ ಸರಮಾಲೆಯೇ ಬದುಕಲ್ಲವೇ? ಅವ ಎದುರಿಗೇ ಬಂದ! ನಿರ್ಧಾರ  ಸಡಿಲಿಸದೆ ಹಾಗೆ ಮುಂದೆ ಹೋಗುತ್ತಿದ್ದೆ.
"ಏನು ರಿವೇಂಜ್ ತೊಗೊತಾ ಇದ್ದೀಯ?  ಅಂತ ಪಕ್ಕಕ್ಕೆ ಬಂದ. ಮತ್ತದೇ ನಗು.
ನಗುವಿನಲ್ಲಿ ಕಳೆದುಹೋಗಿದ್ದೆ ನಾನು. ಏನಂತ ಹೇಳೋದು?
ಅವನೇ ಮತ್ತೆ  ಕೇಳಿದ, "preparatory exams ಚೆನ್ನಾಗಾಯ್ತ ?"
 "ಹೂಂ" ಅಷ್ಟೇ ಬಾಯಿಂದ ಬಂದಿದ್ದು .
"ಆಲ್ ದಿ ಬೆಸ್ಟ್ " ಹೇಳಿ ಮತ್ತೆ ನಕ್ಕ.
"ಥ್ಯಾಂಕ್ಸ್" ಹೇಳಿ ಏಕೋ ನಗಲಾಗಲಿಲ್ಲ.
ಮಾತು ಮುಂದುವರೆಸುವ ಆಸಇಂದಲೋ ಏನೋ, ಅವ ನಿಂತಿದ್ದ ನನ್ನ ಹೆಜ್ಜೆ ಮುನ್ನಡೆದಾಗಿತ್ತು.

"ನೀ ಯಾರೋ ಏನೋ ಸಖ ಎನಗಾಸರೆ" 

Thursday, March 15, 2012

ಹಳ್ಳ ಸೇರದ ಹನಿಗಳು....ಭಾವಬನಿಗಳು

 ಭಾವಬನಿಗಳು ಎಂಬ ಹೆಸರನ್ನ ಹಿರಿಯರಾದ ಸುನಾಥ್ ಸರ್ ಸೂಚಿಸಿದ್ದು.
ಹೊಸ ಪದ ಮತ್ತು it seems to be more apt,  ಅದಕ್ಕೆ ಆ ಶೀರ್ಷಿಕೆಯನ್ನೂ ಕೊಟ್ಟೆ.
 ೧. ದಾರಿ ಅದೇ,
ಕೈಗಳೂ ಎರಡಿವೆ,
ಅಂದು ನಿನದೊಂದು ನನದೊಂದು
ಬೆಸೆದಿತ್ತು ಬಂಧದಲಿ ,
ಇಂದು ನನದೆರಡು ಕೂಡಿವೆ
ಪ್ರಾರ್ಥನೆಯಲಿ

೨. ಮುಗಿಲಿನ ತುಂಬೆಲ್ಲಾ ಅವನದೇ ಬಿಂಬ
ಇವತ್ತು ಅಮಾವಾಸ್ಯೆ, ನನಗೇಕೋ ನಂಬಿಕೆ ಬಾರದು
ಕಂಬನಿ ಹರಿಸಿ ನೆನಪ  ಹೊರ ಕಳಿಸೋಣವೆಂದರೆ
ಹಾಳಾದ್ದು, ಕಂಬನಿಯಲ್ಲೂ ಅವನದೇ ಬಿಂಬ !

೩ ಮಗು ಹೊರ ಬಂತೆಂಬ ಕೂಗು ಕೇಳಿ
ಮಲಗಿದ ತಾಯಿಯ ಕಣ್ಣಲ್ಲೆರಡು   ಹನಿ,
ಒಂದು ತನ್ನ ಬಿಂಬ ಕಂಡದ್ದಕ್ಕಾಗಿ
ಮತ್ತೊಂದು ಅದು ಒಡಲಿಂದ ದೂರಾದ್ದಕ್ಕಾಗಿ

೪.  ಮದುವೆ  ಮುಗಿಸಿದ ಬೀಗತಿಯರಿಬ್ಬರ ಕಣ್ಣು ಜಿನುಗುತ್ತಿದೆ
    ಮಗಳ ತಾಯಿಗೆ ಮಗಳು ದೂರಾಗುವ  ದುಃಖ
 ವರನ  ತಾಯಿಗೆ,  'ಸೊಸೆ'ಯ  ಭಾರದ ದುಃಖ

೫. ಬಟ್ಟ ಬಯಲಲಿ,
ಕಡಿದ ಮರದಲಿ,
ಒಂಟಿ ಹಕ್ಕಿಯ ಮೌನ ತೂಗುತಿತ್ತು
ಮುರಿದ ಬಂದದಲಿ
ಹರಿದ ಭಾವಗಳಲಿ 
ನನ್ನ 'ಇಂದು' ಮುಗಿಯುತ್ತಿತ್ತು

೬. ನನ್ನ ಕಥೆ ಬರೆಯೋಣವೆಂದು ಕೂತೆ
ಒಂದು ಹಾಳೆ ದೊಡ್ದದೆನಿಸಿ, ಮಡಚಿ ಸಣ್ಣದಾಗಿಸುತೆ
ನಡೆದೆ, ಮಡಚಿ ಮಡಚಿ ಕೊನೆಗೆ ಉಳಿದದ್ದು ಒಂದು ಬಿಂದು
ನಾನು ನೀನು ಅದರಲ್ಲಿ ಒಂದು 

Thursday, March 08, 2012

ಪಬ್ಲಿಕ್ ಪರೀಕ್ಷೆ ಎಂಬ ಮಾಯೆ

ಅವನಾಗಲೇ ಕಾಲೇಜ್ ಹುಡುಗ, ದೊಡ್ಡವ ಅನಿಸಿತ್ತು. ಅದೇನೋ ಸ್ಕೂಲಿಗೂ
ಕಾಲೇಜಿಗೂ ಒಂದೇ ವರ್ಷದ ಅಂತರವಾದರೂ  ಅದು ಸ್ಕೂಲು ಮತ್ತು ಕಾಲೇಜಿನ ಮಕ್ಕಳನ್ನ
ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗುತ್ತೆ.

ಆ ದಿನದ ಪರೀಕ್ಷೆ ಸರಿ ಮಾಡಿರಲಿಲ್ಲ ಅದಕೆ ನಿಲ್ಲಲಿಲ್ಲ ಎಂದ ಮೇಲೆ, ಅವನ ಮುಖದಲ್ಲಿ. ಸುಂದರ ನಗೆ ಇತ್ತು
ಅದರ ಅರ್ಥವೇನು? ಸಧ್ಯ  ಪರೀಕ್ಷೆಯಲ್ಲಿ ಹಾಗೇನೂ ಆಗದೆ, ಎಲ್ಲ ಸರಿಯಾಗಿ ಒಳ್ಳೇ ಕಾಲೇಜಿನಲ್ಲಿ ಸೀಟ್
ಸಿಕ್ಕಿದೆ ಎಂಬ ಆನಂದವೇ? ಆ ದಿನ ನಿಲ್ಲಬೇಕೆಂಬ ಮನಸಿದ್ದೂ ನಿಲ್ಲಲಾಗಲಿಲ್ಲ ಎಂದೇ?ಇನ್ನೂ ಹೆಚ್ಚು ಯೋಚಿಸುವ ಮುಂಚೆ ಸ್ಕೂಲಿನ ವ್ಯವಹಾರಗಳು ಶುರುವಾದವು. ಪ್ರತೀ ಟೀಚರ್, ಪ್ರತೀ ಪಿರಿಯಡ್ನಲ್ಲೂ "ನೀವು ಹತ್ತನೇ ತರಗತಿ, ಈ ವರ್ಷ ಪಬ್ಲಿಕ್ ಪರೀಕ್ಷೆ" ಅಂತ ಒಂದು ಮಂತ್ರದಂತೆ  ಹೇಳುತ್ತಿದ್ದರು. ಆ ಮಂತ್ರವಿರದಿದ್ದರೆ ಬಹುಶ ನನ್ನಂಥವರು ಪುಸ್ತಕ ತೆಗೆಯುವ ಕಷ್ಟ ತೆಗೆದುಕೊಳ್ಳುತ್ತಲೇ ಇರಲಿಲ್ಲ.

ಈ ಬಾರಿಯೂ ನಾನು ಗೆಳತಿಗೆ ಅವ ಸಿಕ್ಕ ವಿಷಯ ಹೇಳಲಿಲ್ಲ.  ಗೆಳತಿಗೇನು, ಬೇರೆ ಯಾರಿಗೂ  ಆ ವಿಷಯವನ್ನ ಹೇಳಲಿಲ್ಲ.
ಅವನೇನೂ ಅಂತ ವಿಖ್ಯಾತ ಹುಡುಗನಾಗಿರಲಿಲ್ಲ. ಹಾಗಂತ ಕುಖ್ಯಾತನೂ  ಆಗಿರಲಿಲ್ಲ. ನೋಡಲು ಹೀರೋ ಅಲ್ಲದಿದ್ದರೂ
ಸುಂದರವಾಗೇ ಇದ್ದ. ಅದೇನೋ ಮೋಡಿಇತ್ತು ಅವನ ನಗೆಯಲ್ಲಿ, ಇಲ್ಲದಿದ್ದರೆ ನೋಡಿದರೂ ಮಾತಾಡದೆ ಹೋದ ಸಿಟ್ಟನ್ನ ನಾನಷ್ಟು ಬೇಗ ಮರೆಯುತ್ತಿದ್ದೆನೇ?


ಒಮ್ಮೆ ಹೀಗೆ ಸ್ಕೂಲಿಂದ ಮನೆಗೆ ಹೋಗುವಾಗ, ಅವನ ಮನೆ ಕಂಡಿತ್ತು. ತುಸು ದೊಡ್ಡದೆನ್ನಬಹುದಾದ ಮನೆ, ಅಂಗಳದಲ್ಲಿ ಕಾರು, ಕೈ ದೋಟದಲ್ಲಿ ಅವೆಂತೆತವೋ ಗಿಡಗಳು. ಇದು ಬೇರೆಯದೇ ಲೋಕ ಎನಿಸಿತ್ತು .ಈ ಲೋಕಕ್ಕೂ ನಮ್ಮ ಲೋಕಕ್ಕೂ ಸೇತುವೆಗಳಿಲ್ಲ. ಇವು ದ್ವೀಪಗಳು.ಅವ ಕಾಲೇಜಿಂದ ಬೈಕಲ್ಲಿ ಮನೆಕಡೆ ಬರುವುದು ಕಾಣಿಸಿತು. ನಾ ಲಘುಬಗೆಯಿಂದ
ಮನೆ ಕಡೆ ಹೆಜ್ಜೆ ಹಾಕಿದೆ.
**********************************************************************
ಹಾಗೆ ಸುಮ್ಮನೆ ಅಂತ ಶುರು ಮಾಡಿದ ಸರಣಿ ಮುಂದುವರೆಯಿತು.ಇದನ್ನ ಮುಂದುವರೆಸಬೇಕೆ? ಶಾಲೆಯ ಕನಸುಗಳು ಶಾಲೆ ಬಿಟ್ಟ ನಂತರವೂ ಕಾಡುತ್ತವೆ. ಆದರೆ ಅವು ಮುಂದುವರೆಯುತ್ತವೆಯೇ? ಈ ಕಥೆ ಮುಂದುವರೆಯಬೇಕೆ?
ಕನಸಿನ ಕೊನೆ ಅಂತ ಈ ಭಾಗಕ್ಕೆ ಶೀರ್ಷಿಕೆ ಕೊಟ್ಟಿದ್ದೆ, ( ಮತ್ತೆ ಬದಲಾಯಿಸಿ ಬಿಟ್ಟೆ) ಕೊನೆ ಮಾಡಲು ಮನಸು ಒಪ್ಪುತ್ತಿಲ್ಲ :)

Thursday, March 01, 2012

ಆತ್ಮ ಕುಣಿತ

ನೀನೊಮ್ಮೆ ನನ್ನ ಹಾಡ ಹಾಡ,
ಕುಣಿತಾವ ಚುಕ್ಕಿ ಚಂದ್ರಮ ನೋಡ.

ಮಜ್ಜನವಾಗಿ ಮಡಿಇಂದ ನಿಂತೇನ ,
ಲಜ್ಜೆಯಿಂ ನಾ ಸಿಂಗರಿಸಿಕೊಂಡೆನ,
ಗೆಜ್ಜೆ ಸಪ್ಪಳ ಮಾಡದ್ಹಾಂಗ ಒಗೆದೆನ ,
ಹೆಜ್ಜೆ  ಹೆಜ್ಜೆಗೆ ಹೂವ ಸುರಿದೆನ
 ನೀನೊಮ್ಮೆ ಈ ಪಕ್ಕ ಬಂದು ನೋಡ.
ಕುಣಿತಾವ ಚುಕ್ಕಿ ಚಂದ್ರಮ ನೋಡ


ಪದಪದವ ಕೂಡಿ
ಪದಕೊಂದು ಅರ್ಥವ ಮಾಡಿ,
ಅರ್ಥಕೊಂದು ಭಾವವ ತೀಡಿ,
ಭಾವದ ರಾಗವ ಪಾಡಿ,
ನೀನೊಮ್ಮೆ ಹಾಡಿ  ನೋಡ.
 ಕುಣಿತಾವ ಚುಕ್ಕಿ ಚಂದ್ರಮ ನೋಡ

ಭಾಷೆ ಬೇಲಿಯ ಹಾರಿ
ಭಾವ ಬಂಧವ ಮೀರಿ
ಪಾಪ ಪುಣ್ಯಗಳ ತೋರಿ
ಮನದೆಲ್ಲ   ವಿಷವ  ಕಾರಿ 
ಮನಸಿಂದ  ಒಮ್ಮೆ ಕೂಡ
ಕುಣಿತದ ಲೀನ ಆತ್ಮ  ನೋಡ

(ಇದು  ಸಾಧನ ಕೇರಿಯ ದತ್ತನಿತ್ತ ವರ)
ಈ ರಚನೆಯ ಶೀರ್ಷಿಕೆ ಬದಲಾಯಿಸೋಣವೆಂದು ಪ್ರಯತ್ನ ಪಟ್ಟೆ.
ಯಾಕೋ ಬೇರಾವ ಶೀರ್ಷಿಕೆಯೂ ಇದರಷ್ಟು ಒಪ್ಪಿಗೆಯಾಗಲಿಲ್ಲ