Showing posts with label Festival. Show all posts
Showing posts with label Festival. Show all posts

Tuesday, November 22, 2011

ಹೊಸಗುಂದ ದೇವಸ್ಥಾನದ ಕಾರ್ತೀಕ

ಹೊಸಗುಂದ ಶ್ರೀ ಉಮಾಮಹೇಶ್ವರ ದೇವರು
ಕಾಲುದೀಪಗಳ ಬೆಳಕಲ್ಲಿ
ಶಿವಮೊಗ್ಗದಿಂದ ಸಾಗರಕ್ಕೆ ಬರುವವರು ಹೊಸಗುಂದ ದೇವಸ್ಥಾನ ಎಂಬ ಫಲಕ ನೋಡಿರಬಹುದು. ಅಲ್ಲಿ ಹಿಂದೆ ಹೊಯ್ಸಳರ ಕಾಲದ ದೇವಸ್ಥಾನಗಳಿತ್ತಂತೆ. ಅದೆಲ್ಲಾ ಮುರಿದು ಬಿದ್ದು ಹರಡಿಹೋಗಿತ್ತು ಇತ್ತೀಚಿನ ವರ್ಷಗಳಲ್ಲಿ. ಕಾಡಲ್ಲಿ ಹರಡಿಹೋಗಿದ್ದ ಅವುಗಳನ್ನೆಲ್ಲಾ ಈಗ ಬಾಲಗ್ರಹ ಅಥವಾ ಬಾಲಾಲಯದಲ್ಲಿ ಸ್ಥಾಪಿಸಿ(ದೇವಾಲಯ ಜೀರ್ಣೋದ್ದಾರವಾಗುವ ತನಕ ಮೂರ್ತಿಯನ್ನಿಡುವ ತಾತ್ಕಾಲಿಕ ಗುಡಿ) ದೇಗುಲಗಳ ಜೀರ್ಣೋದ್ದಾರ ಕೆಲಸ ನಡೆಯುತ್ತಿದೆ. ಅಂದಿನ ಶಿಲ್ಪಕಲೆಯ ಸೊಬಗನ್ನು, ಮೂಲಿಕಾವನ ವನ್ನು ನೋಡಲು, ಎರಡಾಳೆತ್ತರದ ಮಾಸ್ತಿಕಲ್ಲುಗಳನ್ನು, ಕರ್ನಾಟಕದಲ್ಲಿ ಎಲ್ಲೂ ಇಲ್ಲದ "ಲಕ್ಷ್ಮೀ ಗಣೇಶ" ನನ್ನು ನೋಡಲು ಹೊಸಗುಂದಕ್ಕೆ ಭೇಟಿ ನೀಡಬಹುದು. ಅಲ್ಲಿಗೆ ಹೋದ ನನ್ನನುಭವವನ್ನು ಪದರೂಪದಲ್ಲಿಳಿಸುವ ಪ್ರಯತ್ನ ನಡೆಸಿದ್ದೇನೆ. ಓದಿ.

ಶ್ರೀ ವೀರಭದ್ರ ದೇವರು
ಇತಿಹಾಸ:
ಕೇರಳದ ರಾಜನೊಬ್ಬ ಈ ಭಾಗಕ್ಕೆ ಬಂದಾಗ ಆತನಿಗೆ ಲಕ್ಷ್ಮೀ ವಿಗ್ರಹದೊಂದಿಗೆ ಗಣಪತಿಯ ವಿಗ್ರಹ ದೊರಕಿತಂತೆ. ಆದ್ದರಿಂದ ಆ ಗಣಪತಿಗೆ ಲಕ್ಷ್ಮೀ ಗಣಪತಿ ಎಂಬ ಹೆಸರು ಬಂದಿತು, ಈ ತರಹದ ಲಕ್ಷ್ಮೀ ಗಣಪತಿಗಳು ಕೇರಳದಲ್ಲಿದೆ, ಆದರೆ ಕರ್ನಾಟಕದಲ್ಲಿರುವುದು ಇದೊಂದೇ ಎಂದು ಅಲ್ಲಿನ ಅರ್ಚಕರು ತಿಳಿಸುತ್ತಾರೆ. ಸಾಂತರಸರು ( ಹೊಯ್ಸಳರು ) ತದನಂತರ ಇಲ್ಲಿ ಹಲವು ದೇವಸ್ಥಾನಗಳನ್ನು ಕಟ್ಟಿಸಿದರಂತೆ. ಅದರಲ್ಲಿ ಮುಖ್ಯವಾದುದು ಉಮಾಮಹೇಶ್ವರಿ ದೇವಸ್ಥಾನ. ಅದಲ್ಲದೇ ವೀರಭದ್ರ, ಸುಭ್ರಮಣ್ಯ, ಪ್ರಸನ್ನನಾಥ, ಚೌಡೇಶ್ವರಿ ದೇಗುಲಗಳೂ ಇವೆ.

ಹೋಗುವ ಮಾರ್ಗ:
ಹೊಸಗುಂದ ದೇವಸ್ಥಾನವು ಸಾಗರದಿಂದ ಸುಮಾರು ಹದಿನೇಳು ಕಿ.ಮೀ ದೂರದಲ್ಲಿದೆ. ದೇವಸ್ಥಾನದವರೆಗೂ ಬಸ್ ಹೋಗುವುದಿಲ್ಲ. ಹೊಸಗುಂದ ಕ್ರಾಸಿನಲ್ಲಿ ಇಳಿದರೆ ಸುಮಾರು ಮೂರು ಕಿ.ಮೀ ನಡೆದು ಹೋಗಬೇಕಾಗುತ್ತದೆ.



ಶ್ರೀ ಚೌಡೇಶ್ವರಿ ದೇವಿ
ಹೊಸಗುಂದಕ್ಕೆ ಹೋಗಬೇಕೆಂಬ ಬಹುದಿನಗಳ ಬಯಕೆ ಈಡೇರುತ್ತಲೇ ಇರಲಿಲ್ಲ. ಅಲ್ಲಿ ಇತ್ತೀಚೆಗೆ ಮೂಲಿಕವನ ಅಭಿವೃದ್ಧಿ ನಡೆಯುತ್ತಿರುವುದು, ಅಲ್ಲಿಗೆ ಪರಿಸರ ಸಂರಕ್ಷಣೆಗಾರರಾದ ಅನಂತ ಹೆಗಡೆ ಆಶೀಸರ ಮೊದಲಾದವರು ಬಂದಿದ್ದು, ಮಠದ ಸ್ವಾಮೀಜಿ ಬಂದಿದ್ದು ಹೀಗೆ ಪತ್ರಿಕೆಗಳಲ್ಲಿ ಪ್ರತೀ ಬಾರಿ ಸುದ್ದಿಯಾದಾಗಲೂ ಅಲ್ಲಿಗೆ ಹೋಗುವ ಆಸೆ ಉಮ್ಮಳಿಸುತ್ತಿತ್ತು. ದೂರದಿಂದ ಬಂದಿದ್ದ ನನ್ನಣ್ಣ ಹೊಸಗುಂದದ ಕಾರ್ತೀಕ ದೀಪೋತ್ಸವಕ್ಕೆ ಹೋಗುವ ಮಾತು ಹೇಳಿದಾಗ ವಿಪರೀತ ಖುಷಿಯಾಗಿ ತಕ್ಷಣ ಒಪ್ಪಿದೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅಂದಗಾಯ್ತು :-)



ಅಲ್ಲಿ ತಲುಪುವ ದಾರಿಯಲ್ಲೇ ಅಭಿವೃದ್ದಿ ಪಡಿಸುತ್ತಿರುವ ಕೆರೆಯೊಂದು ಕಾಣಿಸುತ್ತದೆ. ಹಿಂದೊಮ್ಮೆ ಅದೊಂದು ಪುಷ್ಕರಿಣೆ ಇದ್ದಿರಬಹುದೇನೋ. ಆದರೆ ಕಾಲಕ್ರಮೇಣ ಮುಚ್ಚಿ ನೀರಿನ ಹೊಂಡವಿತ್ತಂತೆ. ಆದರೆ ಅದನ್ನೀಗ ವಿಶಾಲವಾಗಿ ತೋಡಿಸಿ, ಸುತ್ತಲೂ ಇಳಿಯಲು ಮೆಟ್ಟಿಲುಗಲನ್ನಿಟ್ಟು ಚೆನ್ನಾಗಿ ಅಭಿವೃದ್ದಿ ಪಡಿಸಲಾಗಿದೆ. ಹಾಗೇ ಮುಂದೆ ಸಾಗಿದ ನಾವು ಬಾಲಾಲಯದಲ್ಲಿಟ್ಟಿದ್ದ ಸಾಲು ದೇವರನ್ನು ನೋಡಿದೆವು. ಕಾರ್ತೀಕದ ತಯಾರಿ ನಡೆಯುತ್ತಿತ್ತು.



ದೊಡ್ಡ ದೊಡ್ಡ ರಂಗೋಲಿಗಳು. ಅದರ ಮೇಲಿಟ್ಟಿದ್ದ ಹಣತೆಗಳನ್ನು ಹಚ್ಚುವ ಕೆಲಸ ಶುರುವಾಯಿತು. ಎತ್ತರದ ಕಾಲುದೀಪಗಳು, ಹಣತೆಗಳ ಬೆಳಕಿನಲ್ಲಿ ಇಡೀ ವಾತಾವರಣವೇ ಬಂಗಾರದ ಬಣ್ಣದಲ್ಲಿ ಹೊಳೆಯುತ್ತಿತ್ತು. ಆ ಬೆಳಕಲ್ಲಿ ದೇವರನ್ನು ನೋಡಿದಾನುಭವ ವರ್ಣಿಸಲಸದಳ. ಉಮಾಮಹೇಶ್ವರನೂ ಅವನೆದುರಿಗಿದ್ದ ನಂದಿಯೂ ಬಂಗಾರದ ಹಾಳೆಯಲ್ಲೇ ಮಾಡಿಹುದೇನೋ ಎಂಬಂತೆ ಹೊಳೆಯುತ್ತಿದ್ದವು, ಈ ಹಣತೆಗಳ ಹೊಂಬೆಳಕಿಗೆ. ಆಮೇಲೇ ದೇವಸ್ಥಾನದ ಸುತ್ತಲೂ, ಪಕ್ಕಲಿದ್ದ ತುಳಸಿ ಕಟ್ಟೆ, ಸಪ್ತ ಮಾತೃಕೆಯರ ಕಟ್ಟೆ, ಹತ್ತಿರದ ಗೋಡೆಗಳು.. ಹೀಗೆ ಎಲ್ಲೆಲ್ಲೂ ದೀಪಗಳನ್ನಿಟ್ಟು ಹಚ್ಚಲಾಯಿತು. ಎಲ್ಲಿ ನೋಡಿದರೂ ದೀಪಗಳ ಜಗಮಗ





ದೀಪಗಳ ಬೆಳಕಲ್ಲದೇ ಅಲ್ಲಿ ಇನ್ನೊಂದು ವಿಶೇಷ. ಪಶುವೈದ್ಯಕೀಯ ಶಾಸ್ತ್ರವನ್ನೋದಿದ ನನ್ನಣ್ಣ ನಂತರ ಔಷಧಿ ಶಾಸ್ತ್ರದಲ್ಲಿ ಪಿಎಚ್ಡಿ ಪಡೆದು ಸದ್ಯ ಅಮೇರಿಕಾದ ಸಿಯಾಟಿಲ್ನಲ್ಲಿದ್ದಾನೆ. ಆತ ಉತ್ತಮ ಕೊಳಲು ವಾದಕ !!ಅಂದು ಆತನಿಗೆ ಶ್ರೀ ಗಣಪತಿಯ ಸಮ್ಮುಖದಲ್ಲಿ ವೇಣುವಾದನದ ಯೋಗ ಸಿಕ್ಕಿದ್ದು ಆತನಿಗಷ್ಟೇ ಅಲ್ಲದೆ ನಮಗೂ ಅತೀವ ಸಂತಸ ತಂದಿತು. ವಾಸಂತಿ, ರಾಗಮಾಲಿಕ ಹೀಗೆ ನಾಲ್ಕೈದು ರಾಗಗಳನ್ನು ನುಡಿಸಿದ. ಅದಕ್ಕೆ ಅವಕಾಶ ಕಲ್ಪಿಸಿ ಅಲ್ಲಿ ವೇಣು ವಾದನದ ಮಾಧುರ್ಯವೂ ತುಂಬಲು ಕಾರಣರಾದ ಅಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿಎಮ್ಮೆನ್ ಶಾಸ್ತ್ರಿಗಳಿಗೆ , ಚಿನ್ಮಯ ಅವರಿಗೆ ಋಣಿ ನಾನು.




ಎಲ್ಲೆಡೆ ಜಗಮಗಿಸುತ್ತಿದ್ದ ಬೆಳಕಿನ ನಡುವೆ ದೇವರಿಗೆ ಮಹಾಮಂಗಳಾರತಿ. ಎಷ್ಟು ಜನ ಸೇರಿದ್ದರೆಂದರೆ ನಮಗೆ ದೇವರೆದುರು ನಿಲ್ಲಲೇ ಆಗಲಿಲ್ಲ. ಈ ಕಡೆ ಮೂಲೆ, ಆ ಕಡೆ ಮೂಲೆಯಲ್ಲಿ ನೆರೆದಿದ್ದ ಜನರಂತೆಯೇ ನಾವೂ ಒಂದು ಮೂಲೆ ಸೇರಿ ಕಣ್ಣು ಮುಚ್ಚಿ ಪ್ರಾರ್ಥಿಸತೊಡಗಿದೆವು.ದೇವಕಾರ್ಯ, ತೀರ್ಥ ಪಡೆದ ಮೇಲೆ ಮತ್ತೊಂದು ಅಚ್ಚರಿ. ನನ್ನಣ್ಣನಿಗೆ ಅಲ್ಲಿನವರ ಸನ್ಮಾನ :-) . ಸಾಗರ ತಾಲೂಕಿನ ತಹಶೀಲ್ದಾರರಾದ ಶ್ರೀ ಯೋಗೀಶ್ ರವರಿಂದ ಸನ್ಮಾನ. ಅದರ ಫೋಟೋ ಕ್ಲಿಕ್ಕಿಸುವುದು, ಅನಿರೀಕ್ಷಿತವಾಗಿ ಆ ಸಂದರ್ಭದಲ್ಲಿ ಭಾಗಿಯಾಗಿದ್ದು ನನಗೂ ಖುಷಿ ನೀಡಿತು :-)




ನಂತರ ಪ್ರಸಾದ ವಿತರಣೆ ಎದುರಿಗಿದ್ದ ಭೋಜನಶಾಲೆಯಲ್ಲಿ ನಡೆಯುತ್ತಿತ್ತು. ಅದಕ್ಕೆ ಹತ್ತುವ ದಾರಿಯಲ್ಲೇ ನಮ್ಮ ಕಣ್ಣು ಸೆಳೆದಿದ್ದು ಮೂರು ಬೃಹತ್ ಶಿಲಾಶಾಸನಗಳು. ಸುಮಾರು ಹತ್ತಡಿಯಷ್ಟು ಎತ್ತರವಿರಬಹುದೇನೋ. ಅಥವಾ ಅದಕ್ಕಿಂತ ಹೆಚ್ಚೇ ಇರಬಹುದೇನೋ. ಅಷ್ಟು ದೊಡ್ಡ ಶಿಲಾಶಾಸನವನ್ನಾಗಲೀ, ಮಾಸ್ತಿ ಕಲ್ಲನಾಗಲಿ ನಾನು ಈ ಮುಂಚೆ ಎಲ್ಲೂ ನೋಡಿದ್ದಿಲ್ಲ.








ಅಲ್ಲಿ ನೋಡಿದ ನಂತರ ನಾವು ಉಮಾಮಹೇಶ್ವರ ದೇವರ ಮೂಲ ದೇಗುಲದತ್ತ ಸಾಗಿದೆವು.
ದೀಪಗಳ ಬೆಳಕಿನಲ್ಲಿ ಅದನ್ನು ನೋಡುವುದೇ ನಮ್ಮ ಕಣ್ಣುಗಳಿಗೊಂದು ಹಬ್ಬವಾಗಿತ್ತು. ಎಂದೂ ಸಂಜೆಯ ದೀಪದ ಹೊಂಬಳಕಲ್ಲಿ ಪುರಾತನ ದೇವಾಲಯವನ್ನು ನೋಡಿದವನಲ್ಲ ನಾನು. ಕರೆಂಟು ದೀಪದಲ್ಲಿ ನೋಡುವುದಕ್ಕೂ ಹಣತೆಯ ಬೆಳಕಿನಲ್ಲಿ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಲ್ಲವೇ. ಈ ಸವಿಯನ್ನು ಸವಿಯಲು ಒಬ್ಬ ವಿದೇಶಿ ಮಹಿಳೆಯೂ ಅಂದು ಅಲ್ಲಿಗೆ ಬಂದಿದ್ದರು !!

ಉರುಳಿಬಿದ್ದಿದ್ದ ಕಲ್ಲುಗಳನ್ನೆಲ್ಲಾ ಅದರ ನಕ್ಷೆಯಲ್ಲಿದ್ದಂತೆಯೇ ಗುರುತು ಮಾಡಿ(ಪ್ರತಿಯೊಂದಕ್ಕೂ ಒಂದೊಂದು ಸಂಖ್ಯೆ ಕೊಟ್ಟು) ಈಗ ಮತ್ತೆ ಮುಂಚಿನಂತೆಯೇ ಜೋಡಿಸಿ ನಿಲ್ಲಿಸಲಾಗಿದೆ. ದೀಪದ ಬೆಳಕಿನಲ್ಲಿಯೇ ಅಷ್ಟು ಸೊಗಸಾಗಿ ಕಂಡ ಆ ಪುರಾತನ ದೇಗುಲ ಇನ್ನು ಹಗಲು ಹೊತ್ತಿನಲ್ಲಿ ಎಷ್ಟು ಸುಂದರವಾಗಿ ಕಾಣಬಹುದೆಂದು ಯೋಚಿಸಿ. ಅಲ್ಲೇ ಹತ್ತಿರದಲ್ಲೇ ಚೂಡೇಶ್ವರಿ ದೇವತೆಯನ್ನು ಪ್ರತಿಷ್ಟಾಪಿಸುವ ಗುಡಿಯನ್ನು ನೋಡಿದೆವು.





ಶ್ರೀ ಲಕ್ಷ್ಮೀ ಗಣಪತಿ

 ಇನ್ನುಳಿದವು ಅಲ್ಲೇ ಸ್ವಲ್ಪ ದೂರವಂತೆ. ಅಲ್ಲೇ ಮಾರ್ಗಸೂಚಿಯನ್ನೂ, ಉದ್ದೇಶಿತ ಕಟ್ಟಡಗಳ ಛಾಯ ಚಿತ್ರವನ್ನೂ ಹಾಕಿದ್ದಾರೆ. ನೀವು ಮುಂದಿನ ಬಾರಿ ಹೋಗುವ ವೇಳೆಗೆ ಅವುಗಳಲ್ಲಿ ಹಲವು ಪೂರ್ಣಗೊಂಡಿರಬಹುದು. ಹಿಂದಿನ ಬಾರಿ ಸೌಂದರ್ಯವಿದ್ದೂ ಹಾಳಾಗುತ್ತಿರುವ ದೇಗುಲವೊಂದರ ಬಗ್ಗೆ ಬರೆದಿದ್ದೆ. ಈ ಬಾರಿ ಅದೇ ಹೊಯ್ಸಳರ ಕಾಲದ ದೇಗುಲ ಜೀರ್ಣೋದ್ದಾರವಾಗುತ್ತಿರುವುದನ್ನು ಕಂಡು ಬರೆಯಲು ಅತೀವ ಸಂತೋಷವಾಗುತ್ತಿದೆ.

ಅಂದ ಹಾಗೆ ಅಲ್ಲಿನ ಪೂಜಾ ಸಮಯಗಳು ಬೆಳಿಗ್ಗೆ ೬:೩೦-೮:೩೦ , ಮಧ್ಯಾಹ್ನ ೧೧:೩೦-೧, ಸಂಜೆ ೫-೭. ನಿಮ್ಮದೇ ವಾಹನದ ಸೌಕರ್ಯವಿದ್ದರೆ ಉತ್ತಮ. ಮೂಲಿಕಾವನದಲ್ಲಿನ ಪ್ರತೀ ಸಸ್ಯದ ಕನ್ನಡ ಮತ್ತದರ ಸಸ್ಯಶಾಸ್ತ್ರೀಯ ಹೆಸರುಗಳನ್ನೂ ನೋಡಿ ಆನಂದಿಸಬಹುದು.

Wednesday, November 2, 2011

ಇರಗಿಯ ಕಾರ್ತೀಕ

ಇರಗಿಯ ಚಿಕ್ಕಪ್ಪನ ಊರಲ್ಲಿ ಪ್ರತೀವರ್ಷವೂ ಕಾರ್ತೀಕ
ಮಾಸದಿ ನಡೆಯೋ ಶತರುದ್ರಕ್ಕೆ ತಪ್ಪದೆ ಸೇರೋ ಮನೆಮಕ್ಕ
ಹರಿಹರೇಶ್ವರನ ಸಮ್ಮುಖದಲ್ಲೊಂದು ನಂದಿ ಅದರಿಂದೆ ಕೆರೆ
ಅದರಾಚೆ ನಾಗ,ಕ್ಷೇತ್ರಪಾಲ, ಭೂತಗಳು ಸ್ಥಾನ ಕಾಯುತ್ತ|1|

ಅಲ್ಪವರಿತವ ತಿಳಿದಿರಲಿಲ್ಲ ಆ ರುದ್ರನ ಸಂಯೋಗ
ಬರದಿದ್ದೊಬ್ಬ ಭಟ್ಟರ ಜಾಗದಿ ನೋಡಲದವನೇ ಪ್ರಯೋಗ
ಯೋಗವೆನ್ನಲೋ ಪುಣ್ಯವೆನ್ನಲೋ ಕೈಹಿಡಿದದ್ದು ಪುಸ್ತಕ
 ಸೇವೆಯಿದು ಮೂರ್ಖ ಪಾಪವಲ್ಲ ಎಂದಧೈರ್ಯ ದಬ್ಬಿತು ಮಸ್ತಕ|2|



ಚೆಂದಗೊಂಡಿತು ಶತರುದ್ರ, ನೆರೆದ ಭಕ್ತರ ಘೋಷದಲಿ
ಆರತಿ, ಜಾಗಟೆ, ಶಂಖಗಳು,ಜೊತೆಗೆ ಇಂಪಾದ ಕಂಠಗಳು
ತುಂಬುತ ಎಲ್ಲೆಡೆ ದೈವ ಭಕ್ತಿಯ ದೇವಗೆ ಶರಣವ ಸಾರಿದವು
ಕಷ್ಟಗಳೆಲ್ಲವ ಕಳೆಯೋ ಸ್ವಾಮಿ,ಕಾಯೋ ನಮ್ಮೆಂದು ಬೇಡಿದವು|3|

ಅಂದು ರಾತ್ರಿಯಿತ್ತು ರಂಗಪೂಜೆ ಪಾಲಿಸುವಂತಹ ಪೂಜ್ಯನಿಗೆ
ಮುಖವಾಡದಿಂದ ಶೋಭಿತ ದೈವ,ಅಭಿಶೇಕಪ್ರಿಯ ಶಂಭುವಿಗೆ
ಸುತ್ತ ಬೆಳಗಿತಿವೆ ಹತ್ತಾರು ಹಣತೆ, ರಾತ್ರಿಯ ಕತ್ತಲ ಕತ್ತರಿಸೆ
ಅಂಧಕಾರದಲಿ ಮುಳುಗಿಹ ನಮಗೆ ನಿನ್ನಾವದನವ ತೋರಿಸೆ
ಹರಸೆಮ್ಮನಿಂದು, ನಿನ್ನ ಕರುಣಾಬಿಂದು ಕೃಪೆತೋರೊ ಸಿಂಧು
ಮತ್ತೊಮ್ಮೆ ನಮಿಸುವೆ ಶಂಭೋ, ಧರ್ಮದಲೆ ನಡೆಸೆನ್ನ ಎಂದು|4|

Wednesday, August 31, 2011

ಗಣಪತಿ ಹಬ್ಬ


ಗಣಪತಿ ಹಬ್ಬಕ್ಕೆ ಚಿತ್ರ ವಿಚಿತ್ರ ಗಣಪತಿ ಇಡ್ತಾರೆ.. ಮೊನ್ನೆ ದಾರೀಲಿ ಬರ್ಬೇಕಾದ್ರೆ "danger boys ವಿದ್ಯಾವರ್ಧಕ ಗಣಪತಿ" ಅಂತ ಬೋರ್ಡ ನೋಡಿದ್ದೆ. ಕಾರ್ಗಿಲ್ ಗಣಪತಿ, ಉಪೇಂದ್ರ, ಮಣ್ಣಿನ ಮಗ ಹಿಂಗೆ ತರಾವರಿ ಅದ್ವಾನ.ಕೈಯಲ್ಲಿ ಮೆಷಿನ್ ಗನ್ ಹಿಡಿದ, ಹರಕು ಪ್ಯಾಂಟಿನ ಗಣಪತಿ ನೋಡಿ ಎಂಥಾ ಕಾಲ ಬಂತಪ್ಪಾ ದೇವ್ರೆ ಅಂತ ಹಿರಿಯರು ಗೋಳಾಡ್ತಿರ್ತಾರೆ. ಅದರ ಜೊತೆಗೆ ಮೈಕು ಹಾಕಿ ಭಕ್ತಿಗೀತೆಗಳ ಜೊತೆಗೆ ಅನಿಸುತಿದೆ ಯಾಕೋ ಇಂದು, ಹೊಡಿ ಮಗ ಹೊಡಿ ಮಗ.. ತರದ ಹಾಡು ಹಾಕಿ ಇಡೀ ದಿನ ಕುಣಿಯೋರು ಇದ್ದಾರೆ. ಆ ಟೈಮಲ್ಲೇ ತಾರಕ ಮೈಕ ಧ್ವನಿ ಮಧ್ಯೆ ಓದ್ಬೇಕಾಗಿರೋ ಇಂಟರ್ನಲ್ಲು,ಟೆಸ್ಟು ಇರೋ ವಿದ್ಯಾರ್ಥಿಗಳ ಗತಿ ಆ ಗಣಪತಿಗೇ ಪ್ರೀತಿ. ಗಣಪತಿ ಆಚರಣೆಯನ್ನು ಮೊದಲು ಜಾರಿಗೆ ತಂದೋರು ನಮ್ಮ ಮಾನ್ಯ ತಿಲಕರು. ಇದು ಜನರ ಹಬ್ಬ. ದೇವ್ರು ನಮ್ಮ ಕಣ್ಣ ದೃಷ್ಟಿ ಹಂಗೆ, ಯೋಚ್ನೆ ಮಾಡೋ ಹಂಗೆ ಇದ್ರೆ ಪೂಜೆ ಮಾಡೋ ಉತ್ಸಾಹ ಇರುತ್ತೆ ಬಾಸ್ ಅಂತಾರೆ ಹೀಗೆಲ್ಲಾ ಇಟ್ಟೋರು. ವರ್ಷವಿಡೀ ಕೂಗೋರಿಗೆ ಕೇಳೋಲ್ಲ, ನಮಗ್ಯಾಕೆ ಕೇಳ್ತೀರ ಅಂಥ ಸಮರ್ಥನೆ ಬೇರೆ ಮೈಕಾಸುರರಿಗೆ..ಗಣಪತಿ ಇಡ್ತೀವಿ ಅಂತ ರಸ್ತೆ ಅಡ್ಡಗಟ್ಟಿ ಚಂದ ಎತ್ತೋರು, ಮನೆ ಸುತ್ತಮುತ್ತ ಗಣಪತಿ ಇಟ್ಟಿದೀವಿ ಹಸಿರು ನೋಟು ಕೊಡದೇ ಹೋಗೋದೆ ಇಲ್ಲ ಅನ್ನೋ ಜನರು, ಹಲವಾರು ಗಣಪತಿ ಪೂಜಿಸುವ ಗಡಿಬಿಡಿಲಿರೋ ಭಟ್ಟರು..ಯಾವುದು ತಪ್ಪು ಅಂತ ನೀವೇ ಹೇಳ್ಬೇಕು. ಇದ್ಯಾವುದರ ಅರಿವೂ ಇಲ್ಲದೆ ಪಂಚಕಜ್ಜಾಯ ಯಾವಾಗ ಸಿಗತ್ತಪ್ಪಾ ಅಂತ ಕಾಯೋ ಮಕ್ಕಳು, ಅವ್ರು ಪೂಜೆ ಆಗೋದ್ರೊಳಗೆ ತಿಂದ್ರೆ ಗತಿಯೇನು ಅಂಥ ಅವ್ರನ್ನ ಕಾಯೋ ಅಮ್ಮಂದಿರು, ನಿಮ್ಮನೇಲಿ ಎಷ್ಟು ಪಟಾಕಿ ಬಾಕ್ಸ್ ನಮ್ಮನೇಲಿ ಇಷ್ಟು ಎಂಬ ಎಳೆಯರ ಮಾತುಗಳು, ಹೊಸ ಬಟ್ಟೆ ಸಂಭ್ರಮ, ಸೀರೆಗೆ ಮ್ಯಾಚಿಂಗ್ ಸೆಟ್ ಹುಡುಕಾಟದಲ್ಲಿರೋ ಹೆಂಗಳೇರು, ೨-೩ ದಿನ ಆಫಿಸಿಗೆ ರಜಾ ಆರಾಮು ಅಂತಿರೋ ಗಂಡಸ್ರು.. ಹಿಂಗೆ ಒಂದು ಬೇರೆ ದುನಿಯಾನೇ ಸೃಷ್ಟಿ ಆಗುತ್ತೆ ಆ ಸಮಯದಲ್ಲಿ.. ಹಬ್ಬದ ದಿನ ಅಂತೂ ಎಷ್ಟು ಗಣಪತಿ ನೋಡಿದೆ, ಎಷ್ಟು ಕಡೆ ಪಂಚಕಜ್ಜಾಯ ತಿಂದೆ, ಯಾವ್ಯಾವ ಗಣಪತಿ ಮೂಮೆಂಟ್ ಶೋ ನೋಡಿದೆ ಎಂಬ ಉತ್ಸಾಹವೋ ಉತ್ಸಾಹ.. ರಾತ್ರಿಯೆಲ್ಲಾ ಪಟಾಕಿ, ಸುರು ಸುರು ಬತ್ತಿ,ಕುಂಡಗಳ ಬೆಳಕ ಸಂಭ್ರಮ. ಮನೆ ಬಿಟ್ಟು ದೂರ ಓಡಿ ಹೋಗೋ ನಾಯಿಗಳು, ಎಲ್ಲೋ ಅನಿಸುತಿದೆ ನೀನೆ ಎಂದು ಹಾಡ್ತಾ ಇರೋ ಆರ್ಕೆಸ್ಟ್ರಾ, ಟಿ.ವಿ ಯಲ್ಲಿ ಜಭರದಸ್ತ್ ಕಾರ್ಯಕ್ರಮಗಳು, ಮನೆಗೆ ಬರೋ ಹೊಸ ನೆಂಟರುಗಳು.. ಹೀಗೆ ಸಂಭ್ರಮವೋ ಸಂಭ್ರಮ.. ಇನ್ನು ಚೌತಿ ದಿನ ಚಂದ್ರ ಕಾಣ್ತಾನೆ ಅಂತ ಮನೆ ಹೊರಗೇ ಹೊರಡೋದಿಲ್ಲ ಕೆಲೋರು. ಚಂದ್ರ ನೋಡಿದ ತಪ್ಪಿಗೆ ಶ್ಯಮಂತಕ ಪುರಾಣ ಕೇಳೋದು, ನೋಡದಿದ್ದರೂ ಕಥೆ ಚೆನ್ನಾಗಿದೆ ಅಂಥ ಕೇಳೋದು ಹೀಗೆ ಮನೇಲಿರೋ ಹಿರೀರಿಗೆ ಫುಲ್ ಕೆಲಸ.. ಇಟ್ಟಷ್ಟು ದಿನವೂ ದಿನಾ ಹೊಸದು ನೈವೇದ್ಯಕ್ಕೆ ಏನು ಮಾಡೋದು ಅಂತ ಮನೆಯೊಡತಿ ಚಿಂತೆ,ಮಕ್ಕಳಿಗೆ ದಿನಾ ಹೊಸದು ಸಿಗತ್ತಲ್ಲಾ ಅಂತ ಸಂತಸದ ಸಂತೆ. ಹಳ್ಳಿಗಳ ಕಡೆ ಗೌರಿಯನ್ನೂ ತರೋ ಆಚರಣೆ ಇದೆ. ಅದರದ್ದೂ ವಿಭಿನ್ನ ಸಂಭ್ರಮ.


ಗಣೇಶ ಚತುರ್ಥಿಯನ್ನು ಎಂದು ಮೊದಲು ಆಚರಿಸಲಾಯಿತು ಎಂಬುದರ ಬಗ್ಗೆ ನಿಖರ ದಾಖಲೆಗಳಿಲ್ಲ..ಇತಿಹಾಸ ತಜ್ಞ ರಾಜವಾಡೆ ಅವರ ಪ್ರಕಾರ ಗಣೇಶ ಚತುರ್ಥಿಯನ್ನು ಶಾತವಾಹನರು, ರಾಷ್ಟ್ರಕೂಟರು,ಚಾಲುಕ್ಯರ ಕಾಲದಲ್ಲೇ ಆಚರಿಸುತಿದ್ದರಂತೆ..ಮರಾಠ ರಾಜ ಶಿವಾಜಿ ಮಹಾರಾಜನು ಅದನ್ನು ಮಹಾರಾಷ್ಟ್ರದಲ್ಲಿ ವಿಜ್ರಂಭಣೆಯಿಂದ ಆಚರಿಸಲು ಪ್ರಾರಂಭಿಸಿದನು.ಅದೇ ರೀತಿ ಪೇಶ್ವೆಯವರ ಕಾಲದಲ್ಲೂ ಈ ಆಚರಣೆಯಿದ್ದ ಉಲ್ಲೇಖವಿದೆ.ಅವರ ಮನೆದೈವ ಗಣೇಶ.ಅವರ ಆಳ್ವಿಕೆ ದುರ್ಬಲಗೊಂಡ ಕಾಲದಲ್ಲಿ ಅಂದರೆ ೧೮೧೮-೧೮೯೨ ರ ಕಾಲದಲ್ಲಿ ಈ ಆಚರಣೆ ಅವರ ಮನೆತನಕ್ಕೆ ಮಾತ್ರ ಸೀಮಿತಗೊಂಡಿತು ಎನ್ನುತ್ತಾರೆ ಇತಿಹಾಸಕಾರರು. ೧೮೯೩ ರಲ್ಲಿ ಈ ಗಣಪತಿ ಹಬ್ಬವನ್ನು ದೇಶಾದ್ಯಂತ ಆಚರಿಸುವಂತೆ ಮಾಡಿದವರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಅಂದಿನಿಂದ ಆರಂಭಗೊಂಡ ಈ ಸಂಭ್ರಮ ಇಂದು ಭಾರತವನ್ನೂ ಮೀರಿ ನೇಪಾಳ,ಫಿಜಿ,ಕೆನಡಾ,ಅಮೇರಿಕಾ ಮತ್ತಿತರ ದೇಶಗಳಿಗೂ ವ್ಯಾಪಿಸಿದೆ.ಜಾತಿಗಳ ಗೋಡೆಯೊಡೆದು , ಮೇಲು ಕೀಳೆಂಬ ಭಾವ ಮೆಟ್ಟಿ ನಿತ್ತು ದೇಶವೆಲ್ಲಾ ಒಂದಾಗಲೆಂಬ ಉದಾತ್ತ ಉದ್ದೇಶದಿಂದ ತಿಲಕರು ಗಣಪತಿ ಹಬ್ಬವನ್ನು ಜನ ಸಾಮಾನ್ಯರ ಹಬ್ಬವನ್ನಾಗಿ ರೂಪಿಸಿದರು. ಬೀದಿ ಬೀದಿಗಳಲ್ಲಿ ಆಳೆತ್ತರದ ಗಣೇಶನನ್ನು ಪ್ರತಿಷ್ಟಾಪಿಸಲು ಪ್ರೋತ್ಸಾಹಿಸಿದರು ಎನ್ನುತ್ತಾರೆ..


ಮುಂಚೆ ಎಲ್ಲಾ ಮನೆ ಬಳಿಯೆ ತೆಗೆದ ಜೇಡಿ ಮಣ್ಣಿನಿಂದ ಗಣೇಶನನ್ನು ತಯಾರಿಸಿ , ಪೂಜಿಸಿ ನಂತರ ನೀರಲ್ಲಿ ವಿಸರ್ಜಿಸಲಾಗುತಿತ್ತು.. ಮಣ್ಣಿನಿಂದಲೇ ಹುಟ್ಟಿದ ನಾವು ಕೊನೆಗೆ ಸೇರುವುದು ಅಲ್ಲಿಗೇ ಎಂಬ ಆಧ್ಯಾತ್ಮಿಕ ತತ್ವ ಇದರ ಹಿಂದೆ ಅಡಗಿತ್ತು ಎನ್ನುತ್ತಾರೆ. ಆದರೆ ಈಗ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ವ್ಯಾವಹಾರಿಕ ಗಣಪ ಬರಲಾರಂಭಿಸಿದ ಮೇಲೆ ಅದರಿಂದಾಗುವ ಪರಿಸರ ಮಾಲಿನ್ಯವೂ ಅತಿಯಾಗುತ್ತಿದೆ.ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ನೀರಿನ ಆಮ್ಲೀಯತೆ ಅತಿಯಾಗುವುದಲ್ಲದೇ , ಬಣ್ಣಗಳಲ್ಲಿರುವ ತರಹೇವಾರಿ ವಿಷ ರಾಸಾಯನಿಕಗಳಿಂದಲೂ ನೀರು ಹಾಳಾಗುತ್ತದೆ. ಇದರಿಂದ ಸಾವಿರಾರು ಮೀನುಗಳು ಗಣೇಶ ವಿಸರ್ಜನೆಯ ಮಾರನೇ ದಿನ ಸತ್ತು ತೇಲುವುದು ಅನೇಕ ಕಡೆ ವರದಿಯಾಗಿದೆ. ಭಕ್ತರಕ್ಷಕನ ವಿಸರ್ಜನೆಗೆಂದು ಏನೂ ಅರಿಯದ ಆ ಜೀವಿಗಳ ಜೀವ ತೆಗೆಯುವುದು ಎಷ್ಟು ಸರಿ? ಪ್ರತೀ ನಾಲ್ವರಿಗೆ ಒಂದು ಗಣೇಶನಂತೆ ಲೆಖ್ಕಕ್ಕೆ ತೆಗೆದುಕೊಂಡರೂ ಕರ್ನಾಟಕದಲ್ಲೇ ೧ ಕೋಟಿ ಗಣೇಶ.ಪ್ರತೀ ಗಣೇಶನ ನಿರ್ಮಾಣದಲ್ಲೂ ಸುಮಾರು ೨೦೦ ಗ್ರಾಂ ನಷ್ಟು ವಿಷ ರಾಸಾಯನಿಕಗಳನ್ನು ಬಣ್ಣವಾಗಿ ಬಳಸುತ್ತಾರೆ.. ಅಂದರೆ ಎಷ್ಟೊಂದು ಭಾರಿ ಪ್ರಮಾಣದ ಮಾಲಿನ್ಯ ಎಂಬ ಆಕರ್ಷಕ ವರದಿ ಕನ್ನಡ ದಿನಪತ್ರಿಕೆಯೊಂದರಲ್ಲಿ ಮೊನ್ನೆ ಪ್ರಕಟವಾಗಿತ್ತು. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಯಾಕಿಲ್ಲ. ಪರಿಸರ ಸ್ನೇಹಿ ಗಣಪನನ್ನು ನಿರ್ಮಿಸಿ ಎಂಬ ಪರಿಸರವಾದಿಗಳ ಕೂಗು ಮುಗಿಲು ಮುಟ್ಟುತ್ತಿರುವ ವೇಳೆಯಲ್ಲಿ ನಾವೂ ಜಾಗರೂಕರಾಗಬೇಕಾದ ಅಗತ್ಯವಿದೆ. ಗಣಪತಿ ಹಬ್ಬಕ್ಕೆ ಮೂರು ತಿಂಗಳ ಮುಂಚೆಯೇ ಟನಗಟ್ಟಲೇ ಸೀಸರಹಿತ ಬಣ್ಣವನ್ನು ಉತ್ಪಾದಿಸಿ ಗಣಪತಿ ಮಾಡುವವರ ಸಭೆ ಕರೆದು ಆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕಳೆದ ವರ್ಷ ಈ ಪ್ರಯತ್ನ ಶೇ.೩೦ ರಷ್ಟು ಯಶ ಕಂಡಿತ್ತು ಅನ್ನುತ್ತವೆ ಸರ್ಕಾರಿ ಮೂಲಗಳು.. ಈ ಬಾರಿ ಅದು ಇನ್ನೂ ಹೆಚ್ಚಬೇಕಾಗಿದೆ.ಬಣ್ಣವಿಲ್ಲದ ಗಣಪತಿಯನ್ನು ಪೂಜಿಸುವ, ಲೋಹದ ಗಣಪನನ್ನು ಪೂಜಿಸುವ, ಅವನ್ನು ಬಕೆಟ್ನಲ್ಲಿ ವಿಸರ್ಜಿಸುವ ಹೀಗೆ ಹಲವಾರು ಸಲಹೆಗಳು ಪ್ರತೀ ವರ್ಷ ಬರುತ್ತವೆ.. ಇವುಗಳಿಗೆ ಆಸ್ತಿಕ ಬಂಧುಗಳ ಆಕ್ಷೇಪಣೆ ಏನೇ ಇದ್ದರೂ ಪರಿಸರದ ಬಗೆಗಿನ ಕಾಳಜಿಯನ್ನು ಅವರು ಮರೆಯದಿದ್ದರೆ ಚೆಂದ. ಭೂಮಿಯಿಂದಲೇ ನಾವು. ಜಲದಿಂದಲೇ ಜೇವನ. ಆ ಜಲ ಶುಚಿಯಾಗಿದ್ದರಷ್ಟೇ ಸ್ವಸ್ಥ, ಸ್ವಚ್ಚ ಜೀವನ ಸಾಧ್ಯ. ಹಾಗಾಗಿ ಈ ಬಾರಿ ಪ್ರಕೃತಿಪ್ರಿಯರಾಗಿ ಮೋದಕಪ್ರಿಯನ ಹಬ್ಬವನ್ನು ಆಚರಿಸೋಣವೇ?