ರಾತ್ರಿ ಹನ್ನೆರಡಿರಬೇಕು.
ನವಿಲು ರೆಕ್ಕೆ ಬಿಚ್ಚಿ ಹಣೆ ಮೇಲೆ ಕೂತಿತ್ತು. ಜೂನಲ್ಲಷ್ಟೇ ನವಿಲು ನೋಡಿದ ನೆನಪು ನನಗೆ. ಈಗಂತೂ ಕುಣಿದಾಡುವುದಷ್ಟೇ ಬಾಕಿ. ಬೆಂಗಳೂರಿನಂತಹ ಆದಿ ಇಲ್ಲದ ಅಂತ್ಯ ಪ್ರಾಸದಲ್ಲಿ ಈ ನವಿಲು ಬಂದದ್ದಾದರೂ ಹೇಗೆ? ಹೇಗೆ ಬಂದರೇನು? ನನಗೆ ನವಿಲು ಮಾತ್ರ ಮುಖ್ಯ.
ಸಾಕಬೇಕು ಈ ನವಿಲನ್ನು. ಅದು ತಿನ್ನುವ ಹುಳು-ಹುಪ್ಪಟೆ ಸಿಗುವ ಅಂಗಡಿ ತಡಕಾಡಬೇಕು. ಅದನ್ನೆಲ್ಲಿ ಮಲಗಿಸಬೇಕು ಎಂಬುದನ್ನೂ ಯೋಚಿಸಬೇಕಷ್ಟೇ. ಅಜ್ಜಿಯ ಹೇನು ತೆಗೆದ ಹಾಗೆ ನವಿಲಿನ ಗರಿಗಳನ್ನು ತೆಗೆಯಬೇಕು. ಈಗಂತೂ ನವಿಲಿನ ಗರಿಯ ಬೀಸಣಿಗೆ ಸಿಗುವುದೇ ಇಲ್ಲ. ಸಿಕ್ಕರೆ 100 ರುಪಾಯಿ ಎನ್ನುತ್ತಾರೆ ಬೋಳಿಮಕ್ಳು. ಈಗ ನವಿಲೇ ಮನೆಯಲ್ಲಿದೆ. ಬೇಕಿದ್ದಾಗ ಬೀಸಣಿಗೆ ಮಾಡಿಕೊಂಡರಾಯಿತು. ತೀರಾ ಅಗತ್ಯ ಬಿದ್ದರೆ ಮಾಂಸ ಮಾರಿ ತಿಂಗಳ ಬಾಡಿಗೆ ಕಟ್ಟಬಹುದು.
ಇಷ್ಟೆಲ್ಲ ಕಾಟ ಕೊಟ್ಟರೆ ನವಿಲು ಹಾರಿ ಹೋಗಲ್ವಾ? ಯಾಕೆ ಹಾರಿ ಹೋಗುತ್ತೆ? ಅದು ನನ್ನ ಗುಲಾಮ. ಆಫೀಸಿನಲ್ಲಿ ನಾನು ಬಾಸ್ಗೆ ಹೇಗೋ ಹಾಗೆ. ಆದರಿಲ್ಲಿ ನಾನೇ ಬಾಸ್. ಇದನ್ನೆಲ್ಲಾ ನವಿಲಿಗೆ ಅರ್ಥ ಮಾಡಿಸುವುದು ಹೇಗೆ? ಅದೇನು ಕಷ್ಟ ಅಲ್ಲ. ಬಾಸ್ ಪ್ರತೀ ಬಾರಿಯೂ ರಾತ್ರೋರಾತ್ರಿ ಕೆಲಸದ ಪ್ರಪಾತಕ್ಕೆ ಸದ್ದಿಲ್ಲದೆ ನನ್ನನ್ನು ನೂಕಿ ಸಿಗರೇಟು ಹಚ್ಚಿ ಕೂರುತ್ತಾನಲ್ಲ ಹಾಗೆ ಕೂರಬೇಕು. ಬಾಸ್ ಪ್ರತೀ ಬಾರಿ ಹೀಗೆ ಮಾಡಿದಾಗ ನನಗೆ ತಿಳಿಯಲೇ ಇಲ್ಲ. ಇನ್ನು ನವಿಲಿಗೆ ಹೇಗೆ ಗೊತ್ತಿರುತ್ತೆ ಇಂತಹ ಕಪಟತನಗಳು. ಕಾಡಿನಿಂದ ಬಂದ ಮುಂಡೇವಕ್ಕೆ ಏನು ಹೆಚ್ಚಿಗೆ ಗೊತ್ತಿರುತ್ತೆ. ನಿಯತ್ತು ಇರುತ್ತೆ. ಪ್ರತಿಭಟನೆಯ ಸುಳಿಯಂತೂ ಕನಸಿನ ಮಾತು.
ಹೀಗೆಲ್ಲ ಯೋಚಿಸುತ್ತಿದ್ದಾಗ ನವಿಲು ಜೋರಾಗಿ ಕೂಗಿತು. ನನ್ನ ಹಣೆ ಮೇಲೆ ನಾಲ್ಕಾರು ಬಾರಿ ಶತಪಥ ತಿರುಗಿತು.
ನೇರವಾಗಿ ನನ್ನ ಕಣ್ಣೊಂದನ್ನು ಕುಕ್ಕಿತು.

